== ಸೂರ್ಯ ಗ್ರಹಣದ ತತ್ತ್ವ == ಸೂರ್ಯ ಗ್ರಹಣವು ಸೌರಮಂಡಲದಲ್ಲಿ ನಡೆಯುವ ಭೂಮಿ, ಸೂರ್ಯ ಮತ್ತು ಚಂದ್ರರನ್ನೊಳಗೊಂಡ ಒಂದು ಖಗೋಳ ಪ್ರಕ್ರಿಯೆ. ಅಮಾವಾಸ್ಯೆಯ ದಿನ ಮಾತ್ರ ಸೂರ್ಯ ಗ್ರಹಣ ಸಂಭವಿಸಲು ಸಾಧ್ಯ. ಅಮಾವಾಸ್ಯೆಯ ಆ ದಿನ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಇರುವನು. "ಅಮವಾಸ್ಯೆ ಎಂದರೆ ಆ ದಿನ ಚಂದ್ರನು ಸೂರ್ಯನ ಜೊತೆಗೇ (-ಅಲ್ಪಸ್ವಲ್ಪ ಸಮಯದ ವ್ಯತ್ಯಾಸದೊಂದಿಗೆ) ಉದಯವಾಗಿ ಸೂರ್ಯನ ಜೊತೆಗೇ ಸಂಚರಿಸುತ್ತಾ ಅವನ ಜೊತೆಗೇ ಮುಳುಗುತ್ತಾನೆ. ಆ ದಿನ ಚಂದ್ರನ ಬೆನ್ನು ನಮ್ಮ ಕಡೆ ಇರುತ್ತದೆ. ಬೆಳಕು ಬೀಳದ ಚಂದ್ರನ ಬೆನ್ನು ಕತ್ತಲೆಯ ಪ್ರದೇಶ. ಅದಕ್ಕಾಗಿ ನಮಗೆ ಕಾಣುವುದಿಲ್ಲ. ಆ ಚಂದ್ರನ ಬೆನ್ನು ಪ್ರದೇಶ ವರ್ಷದ ಯಾವ ಸಮಯದಲ್ಲೂ ನಮಗೆ ಕಾಣುವುದೇ ಇಲ್ಲ. ಭೂಮಿಯನ್ನು ಸುತ್ತುವಾಗ ಯಾವಾಗಲೂ ಚಂದ್ರನ ಒಂದೇ ಮಗ್ಗುಲು ಭೂಮಿಯ ಕಡೆ ಮುಖಮಾಡಿರುತ್ತದೆ; ಆ ಮಗ್ಗಲು ಪ್ರದೇಶ ಮಾತ್ರಾ ನಮಗೆ ಕಾಣುವುದು.(ಆ ಸದಾ ಕತ್ತಲೆಯ ಪ್ರದೇಶಕ್ಕೆ ಭಾರತದ ಇಸ್ರೊ ಅನ್ವೇಶಣೆಯ ರೋಬಾಟ್‍ನ್ನು ಕಳಿಸಿಸಿತ್ತು. ಅದು ಕೊನೆ ಹಂತದಲ್ಲಿ ದೊಪ್ಪನೆ ಬಿದ್ದು ಸಂಪರ್ಕ ಕಳೆದುಕೊಂಡಿತು.) ಒಂದೇ ಸಮತಲ ರೇಖೆಯ ಮೇಲೆ ಈ ಮೂರೂ ಕಾಯಗಳು ಬರುವ ಆ ಅಮವಾಸ್ಯೆಯ ದಿನ, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಬರುವನು. ಸೂರ್ಯ ಚಂದ್ರ ಭೂಮಿ ಇವು ಒಂದೇ ಸಮತಲ ರೇಖೆಯಲ್ಲಿ ಬಂದಾಗ ಮಾತ್ರಾ ಸೂರ್ಯ ಗ್ರಹಣ ಸ೦ಭವಿಸುತ್ತದೆ. ಎಲ್ಲಾ ಅಮವಾಸ್ಯೆಗಳಲ್ಲೂ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದೇ ಬರುತ್ತಾನೆ. ಹಾಗೆ ಬಂದರೂ ಸೂರ್ಯಗ್ರಹಣವಾಗುವುದಿಲ್ಲ. ಏಕೆಂದರೆ ಎಲ್ಲಾ ಅಮವಾಸ್ಯೆಗಳಲ್ಲಿ ಚಂದ್ರ- ಭೂಮಿ- ಮತ್ತು ಸೂರ್ಯರು ಸಮತಲದಲ್ಲಿ ಒಂದೇ ರೇಖೆಯಲ್ಲಿ ಇರುವುದಿಲ್ಲ, ಸೂರ್ಯನ ಕೇಂದ್ರಬಿಂದು ಮತ್ತು ಭೂಮಿಯ ಕೇಂದ್ರ ಬಿಂದುಗಳನ್ನು ಸೇರಿಸುವ ಸರಳ ರೇಖೆಯನ್ನು ಎಳೆದರೆ ಅದರ ಸ್ವಲ್ಪ ಮೇಲೆ ಅಥವಾ ಕೆಳಗಡೆ ಚಂದ್ರನು ಇರುವನು. ಆಗ ಚಂದ್ರನ ನೆರಳು ಭೂಮಿಯ ಆಚೆ - ಈಚೆ ಬೀಳುವುದು; ಭೂಮಿಯ ಮೇಲೆ ಬೀಳುವುದಿಲ್ಲ. ಭೂಮಿಯ ಮೇಲೆ ಚಂದ್ರನ ನೆರಳು ಬಿದ್ದರೆ ಆ ಸ್ವಲ್ಪ ಭಾಗದ ನೆರಳಿನ ಪ್ರದೇಶದ ಜನರಿಗೆ ಸೂರ್ಯನು ಭಾಗಶಃ ಅಥವಾ ಪೂರ್ಣ ಮರೆಯಾಗುವನು. ಆಗ ಆ ಪ್ರದೇಶದ ಜನರಿಗೆ ಮಾತ್ರಾ ಸೂರ್ಯಗ್ರಹಣ ಎನಿಸುವುದು. ಭೂಮಿಯ ಮೇಲಿನ ಅಲ್ಲಿಯ ಜನರಿಗೆ ನೋಡುವಾಗ ಸೂರ್ಯನಿಗ ಚಂದ್ರನು ಅಡ್ಡಬರುವನು, (ದಟ್ಟ ಮೋಡಬಂದಂತೆ).ಭೂಮಿಗಿಂತ ಬಹಳ ಚಿಕ್ಕ ಕಾಯವುಳ್ಳ ಚಂದ್ರನ ನೆರಳು ಸಂಪೂರ್ಣವಾಗಿ ಭೂಮಿಯನ್ನು ಆವರಿಸುವುದಿಲ್ಲ. == ಭೂಮಿಯ ಚಲನೆ == ಭೂಮಿಯು ತನ್ನ ಅಕ್ಷದಮೇಲೆ ಬುಗುರಿಯಂತೆ ತಿರುಗುವುದು. ಅಕ್ಷವೆಂದರೆ ಭೂಮಿಯ ಉತ್ತರ ಧೃವಕ್ಕೂ ದಕ್ಷಣ ಧೃವಕ್ಕೂ ಭೂಕೇಂದ್ರದಲ್ಲಿ ಎಳೆದ ನೇರ ಊಹಾರೇಖೆ. ಆ ಅಕ್ಷದ ಮಧ್ಯದಿಂದ ೯೦ ಡಿಗ್ರಿ ಸಮಕೋನದಲ್ಲಿ ಭೂಮಿಯ ಮೇಲೆ ಸುತ್ತಲೂ ಎಳೆದ ರೇಖೆಯು- ಭೂಮಧ್ಯರೇಖೆ. ಭೂಮಿಯು ಸೂರ್ಯನನ್ನು ಸುತ್ತುವುದು ಈ ಎರಡು ಬಗೆಯ ಚಲನೆ ಮುಖ್ಯವಾದುದು. ಭೂಮಿಯು ತನ್ನ ಅಕ್ಷದ ಮೇಲೆ ತಿರುಗುವಾಗ ಅದರ ಅಕ್ಷವು ಸೂರ್ಯನಿಗೆ ಸುಮಾರು ೨೩.೫ ಡಿಗ್ರಿ ವಾಲಿರುತ್ತದೆ. ಎಂದರೆ ಸೂರ್ಯನ ಕಿರಣ ಭೂಮಧ್ಯ ರೇಖೆಯ ೨೩.೪ ಡಿಗ್ರಿ ಆಚೆ ಉತ್ತರಕ್ಕೂ-, ೨೩.೫ ಡಿಗ್ರಿ ಈಚೆ ದಕ್ಷಿಣಕ್ಕೂ ಓರೆಯಾಗಿ ಬೀಳುವುದು. ಅದನ್ನೇ ಮಕರ ಸಂಕ್ರಾಂತಿ ವೃತ್ತ ಮತ್ತು ಕರ್ಕಾಟಕ ಸಂಕ್ರಾಂತಿ ವೃತ್ತವೆಂದು ಗುರುತಿಸಲಾಗುವುದು. ಗ್ರಹಣದ ಮಾಹಿತಿ ತಿಳಿಯಲು ಈ ಊಹಾ ರೇಖೆಗಳ ಪರಿಚಯ ಮುಖ್ಯವಾದುದು. == ರಾಹುಗ್ರಸ್ತ- ಕೇತುಗ್ರಸ್ತ ಗ್ರಹಣಗಳು == ರಾಹು ಕೇತುಗಳ ವಿಚಾರ: ಸೂರ್ಯ ಚಂದ್ರರನ್ನು ರಾಹು ಅಥವಾ ಕೇತು ಆಕ್ರಮಿಸುವುದು ಎಂಬುದು ಪೌರಾಣಿಕ ನಂಬುಗೆ. ಇವುಗಳನ್ನು ಛಾಯಾ ಗ್ರಹಗಳೆಂದೂ, ಕಣ್ಣಿಗೆ ಅಗೋಚರ ಗ್ರಹಗಳೆಂದು ಹೇಳಲಾಗುತ್ತದೆ. ಆದರೆ ಇವು ಗ್ರಹಗಳೇ ಅಲ್ಲ. ಇವು ಆಕಾಶ ಕಾಯಗಳೇ ಅಲ್ಲ. ಇವು ಆಕಾಶದಲ್ಲಿ ಎರಡು ಊಹಾ ಬಿಂದುಗಳು. ಖಗೋಲ ಶಾಸ್ತ್ರದ ಪ್ರಕಾರ ಆಕಾಶದಲ್ಲಿ ಭೂಮಧ್ಯ ರೇಖೆಯನ್ನು ಆಕಾಶಕ್ಕೆ ವಿಸ್ತರಿಸಿದರೆ ಅದು ಖಗೋಳ-ವಿಷುವದ್ ವೃತ್ತ ಮತ್ತು ಸೂರ್ಯನು ಭೂಮಿಯನ್ನು ವರ್ಷದಲ್ಲಿ ಒಂದು ಬಾರಿ ಸುತ್ತುತ್ತಾನೆ ಎಂದು ಇಟ್ಟುಕೊಂಡರೆ, ಸೂರ್ಯನ ಪಥ ಖಗೋಲದಲ್ಲಿ ಒಂದು ವೃತ್ತವಾಗುವುದು. ಅದು ಕ್ರಾಂತಿ ವೃತ್ತ. ಅದರಲ್ಲಿ ಈ ಮೇಷಾದಿ ನಕ್ಷತ್ರ ಪುಂಜ(ರಾಶಿ)ಗಳನ್ನೂ, ಅಶ್ವಿನಿ ಆದಿಯಾಗಿ ನಕ್ಷತ್ರಗಳನ್ನೂ ಗುರುತಿಸಲಾಗುವುದು. (ಭೂಮಿಯು ಸೂರ್ಯನನ್ನು ಸುತ್ತುವ ಪಥವೇ ಕ್ರಾಂತಿವೃತ್ತ - ಸೂರ್ಯ ಭೂಮಿಯನ್ನು ಸುತ್ತುವನೆಂದು ಭಾವಿಸಿದರೂ ಅದೇ ಪಥ ಬರುವುದು) ಭೂಮಿಯ ಅಕ್ಷವು ಸೂರ್ಯನಿಗೆ ೨೩.೪ ಡಿಗ್ರಿ ಓರೆಯಾಗಿರುವುದರಿಂದ, ಭೂಮಧ್ಯ ರೇಖೆಯನ್ನು ಆಕಾಶಕ್ಕೆ ವಿಸ್ತರಿಸಿದರೆ ಬರುವ ವಿಷುವದ್ ವೃತ್ತ ಕ್ಕೆ ೨೩.೪ ಡಿಗ್ರಿಯಷ್ಟು ಓರೆಯಾಗಿ ಒಂದು ಊಹಾ ಕ್ರಾಂತಿ ವೃತ್ತ ವಾಗುವುದು. ಭೂಮಿಯನ್ನು ಚಂದ್ರನು ಸುಮಾರು ೨೯ ದಿನಗಳಲ್ಲಿ ಒಂದು ಸುತ್ತು ಸುತ್ತುತ್ತಾನೆ. ಚಂದ್ರನ ಪಥ ಸೂರ್ಯನ ಕ್ರಾಂತಿ ವೃತ್ತ ಪಥಗಳು ಸಮತಲದಲ್ಲಿ ಇಲ್ಲ; ಸ್ವಲ್ಪ ಓರೆಯಾಗಿವೆ. ಅದರಿಂದ ಸೂರ್ಯ ಚಂದ್ರರ ಪಥದ ದಾರಿ ಎರಡು ಬಳೆಗಳು ಒಂದರೊಳಗೊಂದು ಸೇರಿ ಉತ್ತರ ಮತ್ತು ದಕ್ಷಿಣದಲ್ಲಿ ಎರಡು ಕಡೆ ಒಂದನ್ನೊಂದು ಎರಡು ಬಿಂದುಗಳಲ್ಲಿ ಕತ್ತರಿಸುತ್ತವೆ. ಈ ಬಿಂದುಗಳೇ ರಾಹು ಮತ್ತು ಕೇತುಗಳು. (ಚಿತ್ರದಲ್ಲಿ - N1; 2;) ಈ ಬಿಂದುಗಳನ್ನು ಇಂಗ್ಲೀಷ್ ನಲ್ಲಿ'ನೋಡ್'ಗಳೆಂದು ಕರೆಯುತ್ತಾರೆ. ಈ ಊಹಾ ಬಿಂದುಗಳಲ್ಲಿ ಉತ್ತರ ದಿಕ್ಕಿನದು ರಾಹು. ದಕ್ಷಿಣ ದಿಕ್ಕಿನದು ಕೇತು. ಈ ಬಿಂದುಗಳಲ್ಲಿ ಚಂದ್ರನು ಬಂದಾಗ ಅಮವಾಸ್ಯೆಯಲ್ಲಿ ಸೂರ್ಯ ಗ್ರಹಣವು ಹುಣ್ಣಿಮೆಯಲ್ಲಿ ಚಂದ್ರ ಗ್ರಹಣವು ಆಗುವುದು. ರಾಹು ಬಿಂದುವಿನಲ್ಲಿದ್ದರೆ ಅದು ರಾಹು ಗ್ರಸ್ತ ; ಕೇತು ಬಿಂದುವಿನಲ್ಲಿದ್ದರೆ ಅದು ಕೇತುಗ್ರಸ್ತ. ಆಗ ಸೂರ್ಯ, ಭೂಮಿ, ಚಂದ್ರ ಒಂದೇ ರೇಖೆಯಲ್ಲಿ ಬರುವುದು. ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ, ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದಾಗ ಆ ನೆರಳಿರುವ ಪ್ರದೇಶಕ್ಕಷ್ಟೇ ಸೂರ್ಯಗ್ರಹಣ. === ಸೂರ್ಯ ಚಂದ್ರ ಗ್ರಹಣಗಳು === ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣ ನಡುವೆ ಆಗಾಗ್ಗೆ ಗೊಂದಲ ಉಂಟಾಗುತ್ತದೆ. ಇವೆರಡೂ ಸೂರ್ಯ, ಭೂಮಿ ಮತ್ತು ಚಂದ್ರನ ನಡುವಿನ ಪರಸ್ಪರ ಕ್ರಿಯೆಯನ್ನು ಒಳಗೊಂಡಿದ್ದರೂ, ಅವುಗಳ ಪರಸ್ಪರ ಕ್ರಿಯೆಯಲ್ಲಿ ಅವು ಬಹಳ ಭಿನ್ನವಾಗಿವೆ. ಭೂಮಿಯಿಂದ ಸೂರ್ಯನ ಅಂತರವು ಚಂದ್ರನ ಅಂತರಕ್ಕಿಂತ 400 ಪಟ್ಟು, ಮತ್ತು ಸೂರ್ಯನ ವ್ಯಾಸವು ಚಂದ್ರನ ವ್ಯಾಸಕ್ಕಿಂತ 400 ಪಟ್ಟು ಹೆಚ್ಚು. ಈ ಅನುಪಾತಗಳು ಸರಿಸುಮಾರು ಒಂದೇ ಆಗಿರುವುದರಿಂದ, ಭೂಮಿಯಿಂದ ನೋಡಿದಂತೆ ಸೂರ್ಯ ಮತ್ತು ಚಂದ್ರರು ಸರಿಸುಮಾರು ಒಂದೇ ಗಾತ್ರದಲ್ಲಿ ಕಂಡುಬರುತ್ತಾರೆ: (ಕೋನೀಯ ಅಳತೆಯಲ್ಲಿ ಸುಮಾರು 0.5 ಡಿಗ್ರಿ ಚಾಪ.). ಸಾರಾಂಶ- ಸೂರ್ಯನು ಭೂಮಿಯಿಂದ ಬಹಳ ದೂರದಲ್ಲಿದ್ದಾನೆ. ಚಂದ್ರನು ಆ ದೂರಕ್ಕೆ ಲೆಕ್ಕ ಹಾಕಿದರೆ ಭೂಮಿಯ ಹತ್ತಿರದಲ್ಲಿದ್ದಾನೆ. ಸೂರ್ಯನ ಗಾತ್ರ ಬಹಳ ದೊಡ್ಡದು, ಆದರೆ ಬಹಳ ದೂರದಲ್ಲಿರುವುದರಿಂದ ಸರಿ ಸುಮಾರು ಸೂರ್ಯನು ಸಂದ್ರನಷ್ಟೇ ಗಾತ್ರದಲ್ಲಿ ಕಾಣುವನು. == ಡಿಸೆಂಬರ್ 26, 2019 ರ ಗ್ರಹಣ == ಇದು 2019 ರ ಕೊನೆಯ ಸೂರ್ಯಗ್ರಹಣ. 2019 ರ ವಾರ್ಷಿಕ ಗ್ರಹಣದ ಕೇಂದ್ರ ಮಾರ್ಗವು ಸೌದಿ ಅರೇಬಿಯನ್ ಪರ್ಯಾಯ ದ್ವೀಪ, ದಕ್ಷಿಣ ಭಾರತ, ಸುಮಾತ್ರಾ, ಬೊರ್ನಿಯೊ, ಫಿಲಿಪೈನ್ಸ್ ಮತ್ತು ಗುವಾಮ್ ಮೂಲಕ ಹಾದುಹೋಗುತ್ತದೆ. ಭಾಗಶಃ ಗ್ರಹಣವು ಕೇಂದ್ರ ಮಾರ್ಗದಿಂದ ಸಾವಿರಾರು ಕಿಲೋಮೀಟರ್ ಅಗಲದಲ್ಲಿ ಗೋಚರಿಸಿದೆ. ಇದು ಪೂರ್ವ ಯುರೋಪಿನ ಸಣ್ಣ ಭಾಗಗಳನ್ನು, ಏಷ್ಯಾದ ಹೆಚ್ಚಿನ ಭಾಗ, ಉತ್ತರ / ಪಶ್ಚಿಮ ಆಸ್ಟ್ರೇಲಿಯಾ, ಆಫ್ರಿಕಾದಲ್ಲಿ ಪೂರ್ವ, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರವನ್ನು ಒಳಗೊಂಡಿದೆ.ಗ್ರಹಣವು .96 ರಷ್ಟನ್ನು ಹೊಂದಿರುವ "ಆಂಟಂಬ್ರಾದೊಂದಿಗೆ"(ನೆರಳುಪ್ರದೇಶ?) ಪ್ರಾರಂಭವಾಯಿತು ಮತ್ತು ಇದು 164 ಕಿಲೋಮೀಟರ್ ಅಗಲವನ್ನು ವಿಸ್ತರಿಸಿತು. ಮತ್ತು ಸೆಕೆಂಡಿಗೆ ಸರಾಸರಿ 1.1 ಕಿಲೋಮೀಟರ್ ವೇಗದಲ್ಲಿ ಪೂರ್ವದ ಕಡೆಗೆ ಚಲಿಸಿತು.. ದಕ್ಷಿಣ ಚೀನಾ ಸಮುದ್ರದಲ್ಲಿ (0 ° 45'54.0 "ಎನ್ 105 ° 29'06.0" ಇ) ಸಂಭವಿಸುವ 5.30 ಯುಟಿ 1 ನಲ್ಲಿ, ವಾರ್ಷಿಕ ದೀರ್ಘಾವಧಿಯ ಅವಧಿ 3 ನಿಮಿಷ 40 ಸೆಕೆಂಡುಗಳು. === ಭಾರತದಲ್ಲಿ ಗೋಚರ === ಈ ಗ್ರಹಣ ಸೌದಿ ಅರೇಬಿಯಾದಲ್ಲಿ ರಿಯಾದ್‌ನಿಂದ ಈಶಾನ್ಯಕ್ಕೆ 220 ಕಿಲೋಮೀಟರ್ ದೂರದಲ್ಲಿ 03:43 ಯುಟಿ 1 ಕ್ಕೆ ಪ್ರಾರಂಭವಾಗಿದ್ದು, ಗುವಾಮ್‌ನಲ್ಲಿ 06: 59.4 ಯುಟಿ 1 ಕ್ಕೆ ಕೊನೆಗೊಂಡಿದೆ. ಇದು ಕೇರಳದ ಕಣ್ಣೂರು ಬಳಿ 03:56 ಯುಟಿ 1 ಕ್ಕೆ ಭಾರತವನ್ನು ತಲುಪಲಿದೆ. ನೆರಳು ಭಾರತದ ಆಗ್ನೇಯ ಕರಾವಳಿಯನ್ನು 04:04 ಯುಟಿ 1 ಕ್ಕೆ ತಲುಪಿದೆ. ಉತ್ತರ ಶ್ರೀಲಂಕಾದ ಮೂಲಕ ಪ್ರಯಾಣಿಸಿದರೆ ಅದು ಬಂಗಾಳಕೊಲ್ಲಿಯತ್ತ ಸಾಗಿದೆ. === ಕರ್ಣಾಟಕದಲ್ಲಿ ಗೋಚರ ವಿವರ === ಗ್ರಹಣ ಲಕ್ಷಣ: ಈ ‘ಕಂಕಣ ಸೂರ್ಯಗ್ರಹಣ’ವು ಕರ್ನಾಟಕ ರಾಜ್ಯಕ್ಕೆ ಅತ್ಯಂತ ಅಪರೂಪದ ವಿಷಯವಾಗಿದೆ. ಚಂದ್ರನ ದಟ್ಟ ನೆರಳು 39 ವರ್ಷಗಳ ಬಳಿಕ ರಾಜ್ಯದ ಕರಾವಳಿ ಪ್ರದೇಶ ಮೇಲೆ ಬಿದ್ದಿದೆ. ಜನರಲ್ಲಿ ವೈಜ್ಞಾನಿಕವಾದ ಅರಿವು ಮೂಡಿಸಲು ‘ಖಗ್ರಾಸದಿಂದ ಕಂಕಣದವರೆಗೆ’ ಎಂಬ ಅಭಿಯಾನ 22ರಿಂದ ನಗರದಲ್ಲಿ ನೆಡೆಯಿತು. ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ಶಿವಮೊಗ್ಗದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಜ್ಯದ ಕರಾವಳಿಯುದ್ದಕ್ಕೂ ಈ ಜಾಗ್ರತಿಯ ಅಭಿಯಾನವನ್ನು ಹಮ್ಮಿಕೊಂಡಿತ್ತು. ಈ ಅಭಿಯಾನ ಡಿಸೆಂಬರ್ 26 ರಂದು ಮಂಗಳೂರಿನಲ್ಲಿ ಮುಕ್ತಾಯವಾಯಿತು. 45 ವರ್ಷದ ನಂತರ - ಕರ್ನಾಟಕದಲ್ಲಿ ಮುಂದಿನ ಕಂಕಣ ಸೂರ್ಯಗ್ರಹಣ: 2064ರ ಫೆ.17 ರಂದು. 149 ವರ್ಷದ ನಂತರ -ಸಂಪೂರ್ಣ ಸೂರ್ಯಗ್ರಹಣ 2168ರ ಜುಲೈ 5 ರಂದು. ಹಿಂದಿನ ಖಗ್ರಾಸ ಗ್ರಹಣಗಳು: ‘1980ರಲ್ಲಿ ಆಗಿದ್ದ ಖಗ್ರಾಸ ಸೂರ್ಯಗ್ರಹಣವು ಅಂಕೋಲಾದಲ್ಲಿ 2.50 ನಿಮಿಷ ಸಂಪೂರ್ಣವಾಗಿ ಗೋಚರಿಸಿತ್ತು. 2010ರ ಕಂಕಣ ಸೂರ್ಯಗ್ರಹಣವು ತಮಿಳುನಾಡಿನ ರಾಮೇಶ್ವರದಲ್ಲಿ ಕಾಣಿಸಿತ್ತು. ಆದರೆ, ಕರ್ನಾಟಕದಲ್ಲಿ ಕಂಡಿರಲಿಲ್ಲ. ಕಂಕಣ ಗ್ರಹಣ ಕಾಲ ಪ್ರದೇಶ; 2019 ಡಿಸೆಂಬರ್ 26ರಂದು ಬೆಳಿಗ್ಗೆ 8.04ರಿಂದ ಆರಂಭ- ಬೆಳಿಗ್ಗೆ 11.04ಕ್ಕೆ ಸಮಾಪ್ತಿ. ಮಂಗಳೂರಿನಲ್ಲಿ 3.12 ನಿಮಿಷ ಶೇ 93.07ರಷ್ಟು ಪ್ರಮಾಣದಲ್ಲಿ ಗೋಚರ. ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ ಪರಿಪೂರ್ಣವಾಗಿ ಗ್ರಹಣ ಗೋಚರ. ==== ಕೊಡಗಿನಲ್ಲಿ ಕಂಡ ಗ್ರಹಣದ ಚಿತ್ರಗಳು ==== ಸೂರ್ಯಗ್ರಹಣ: ಕಂಕಣ;26 ಡಿಸೆಂಬರ್ 2019 === ರಾಜ್ಯದ ವಿವಿಧೆಡೆ ಗ್ರಹಣದ ಪ್ರಮಾಣ === == ವಿಜ್ಞಾನಿಗಳ ಎಚ್ಚರಿಕೆಯ ಸೂಚನೆ == ಸೂರ್ಯನ ಪರಿಧಿಯ ಬಹುಭಾಗ ಬಳೆಯಂತೆ ಗೋಚರಿಸುವಾಗ ಅಂಚಿನ ಕಿರಣಗಳಲ್ಲಿ ಹೆಚ್ಚು ಪ್ರಖರತೆ ಇದ್ದೇ ಇರುತ್ತದೆ. ಆದ್ದರಿಂದ ಸೂಕ್ತ ಸೌರ ಕನ್ನಡಕ, ದೂರದರ್ಶಕಗಳಿಲ್ಲದೆ ಗ್ರಹಣವನ್ನು ವೀಕ್ಷಿಸಲೇಬಾರದು. ಮಸಿ ಹಿಡಿದ ಗಾಜಿನ ಮೂಲಕ ಯಾವುದೇ ಕಾರಣಕ್ಕೂ ಸೂರ್ಯನ ಕಡೆ ನೋಡಬಾರದು. ಅದರಿಂದ ಕಣ್ಣಿನ ಒಳಗಿರುವ ನರಮಂಡಲದ ರೆಟಿನಾಕ್ಕೆ ಸರಿಪಡಿಸಲಾಗದ ಮಾಡಲು ಆಗದ ಅಪಾಯವಾಗುವ ಸಂಭವ ಹೆಚ್ಚು == ನೋಡಿ == ಗ್ರಹಣ ಭೂಮಿ ಚಂದ್ರ ಸೂರ್ಯ ಸೂರ್ಯ ಗ್ರಹಣ == ಹೊರ ಸಂಪರ್ಕ == ನಾಸಾ: 2019 26 ನಾಳೆ ಸೂರ್ಯನಿಗೆ ಕಂಕಣ; ಗ್ರಹಣದ ಪೂರ್ಣ ಮಾಹಿತಿ ಇಲ್ಲಿದೆ;ಶ್ರೀ ಗುರು ;: 25 ಡಿಸೆಂಬರ್ 2019 ಸಿಂಗಪೂರ್‌ನಲ್ಲಿ ಗ್ರಹಣ ಕಂಡಿದ್ದು ಹೀಗೆ:::- ನೋಡಿ: ಮಧ್ಯಪ್ರಾಚ್ಯ ಮತ್ತು ಸಿಂಗಪೂರ್‌ನಲ್ಲಿ ಗ್ರಹಣ ಕಂಡಿದ್ದು ಹೀಗೆ.;26 ಡಿಸೆಂಬರ್ 2019 == ಉಲ್ಲೇಖ ==